Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇಂದು ಬಲಿಪಾಡ್ಯ : ಆನಂದದ ಅರಿವು

ನಿಸರ್ಗದ ವಿದ್ಯಮಾನಗಳಲ್ಲಿ ಕತ್ತಲೆ–ಬೆಳಕಿನ ‘ಆಟ’ ಸ್ವಾರಸ್ಯಕರ. ಕತ್ತಲೆಯು ಕಳೆದು ಬೆಳಕು ಮೂಡುವುದು; ಬೆಳಕು ಮರೆಯಾಗಿ ಕತ್ತಲು ಕವಿಯುವುದು – ಇದು ನಿರಂತರ ಚಕ್ರ. ಕತ್ತಲೆಯಿದ್ದಾಗ ಭಯ, ಅಪಾಯ; ಅದೇ ಬೆಳಕಿನಲ್ಲಿ ಧೈರ್ಯ, ಭರವಸೆ. ಹೀಗಾಗಿ ಮನುಷ್ಯನ ಜೀವನದಲ್ಲಿ ಬೆಳಕು ಎನ್ನುವುದು ಧೈರ್ಯಕ್ಕೂ ಪ್ರಗತಿಗೂ ಒಳತಿಗೂ ಸಂಕೇತ ಎನಿಸಿಕೊಂಡಿತು; ವಿಶಾಲಾರ್ಥದಲ್ಲಿ ‘ಬೆಳಕು’ ಎಂಬುದು ಜ್ಞಾನಕ್ಕೆ ಸಂಕೇತವೇ ಆಯಿತು. ಜ್ಞಾನವನ್ನು ಬಯಸುವುದೂ, ಬೆಳಕನ್ನು ಅರಸುವುದು ‘ಸಂಸ್ಕೃತಿ‘ ಎಂದು ಹೆಸರಾಯಿತು.

ಕತ್ತಲೆ–ಬೆಳಕಿನ ಸುತ್ತಾಟದಲ್ಲಿ ಒಳಿತು–ಕೆಡಕುಗಳ ಚಕ್ರವನ್ನೂ ಕಾಣಬಹುದು. ರಾಕ್ಷಸತ್ವದ ಸೋಲು ಮತ್ತು ದೈವತ್ವಗಳ ಗೆಲುವಿನಲ್ಲಿ ಈ ತತ್ತ್ವ ಅಡಕವಾಗಿದೆ. ರಾಕ್ಷಸರು ಹೊರಗಿನವೇ ಆಗಬೇಕಿಲ್ಲ; ನಮ್ಮೊಳಗೂ ರಾಕ್ಷಸರಿದ್ದಾರೆ. ಆಲಸ್ಯ, ಸ್ವಾರ್ಥ, ಅಹಂಕಾರ, ಕ್ರೌರ್ಯ, ಕೇಡಿನ ಬುದ್ಧಿ, ಕಾಮ, ಕ್ರೋಧ, ಮದ, ಮಾತ್ಸರ್ಯ – ಇಂಥವೆಲ್ಲವೂ ರಾಕ್ಷಸತ್ವದ ಪ್ರತಿನಿಧಿಗಳೇ. ಈ ದುರ್ಗುಣಗಳಿಗೆ ನಮ್ಮ ಮೈಯನ್ನು ಒಪ್ಪಿಸಿದರೆ ಆಗ ನಾವು ರಾಕ್ಷಸರೇ ಆಗುತ್ತೇವೆಯಷ್ಟೆ!

ಬಲಿಪಾಡ್ಯಮಿ ಆಚರಣೆಯ ಭಿತ್ತಿಯಲ್ಲಿ ಈ ಸಂದೇಶವೂ ಇದೆ. ಬಲಿ ಚಕ್ರವರ್ತಿಯು ದಾನಶೀಲ; ಯಾರು ಏನು ಕೇಳಿದರೂ ಕೊಡುವಂಥವನು. ಆದರೆ ಅವನ ಈ ದಾನಬುದ್ಧಿಯೇ ಅವನ ಪಾಲಿಗೆ ದಾನವಬುದ್ಧಿಯಾಯಿತು. ನಾನೊಬ್ಬ ಅಸಾಮಾನ್ಯ ದಾನಶೀಲ – ಎಂಬ ಅಹಂಕಾರದ ಪರ್ವತ ಅವನ ತಲೆಯನ್ನು ಆಕ್ರಮಿಸಿತು. ‘ಇಡಿಯ ಸೃಷ್ಟಿ ಭಗವಂತನ ಆಸ್ತಿ; ಚರಾಚರ ವಸ್ತುಗಳೆಲ್ಲವೂ ಅವನ ಅಧೀನ. ಇದನ್ನು ಅರ್ಥಮಾಡಿಕೊಂಡು, ಲೋಭವನ್ನು ತ್ಯಜಿಸಿ, ನಿನಗೆ ಎಷ್ಟು ಬೇಕು ಅಷ್ಟನ್ನೇ ಬಳಸಿಕೋ. ಇವೆಲ್ಲವೂ ಭಗವಂತನಿಗೆ ಸೇರಿದ ಸ್ವತ್ತು ಎಂಬ ಸತ್ಯವನ್ನು ಮರೆಯಬೇಡ’ ಎಂಬ ಆರ್ಷಪ್ರಜ್ಞೆ ಅವನಿಂದ ದೂರವಾಯಿತು. ಎಲ್ಲೆಲ್ಲೂ ವ್ಯಾಪಿಸಿರುವ ಆ ಈಶ್ವರತತ್ತ್ವವನ್ನು ಮತ್ತೆ ನೆನಪಿಸಲು ವಿಷ್ಣುವೇ ಬಲಿಯಲ್ಲಿಗೆ ಬರಬೇಕಾಯಿತು. ಬಲಿಯ ಸಣ್ಣತನವನ್ನು ದೂರಮಾಡಬೇಕಾಗಿದ್ದುದರಿಂದ ವಿಷ್ಣುವೂ ಅವನಲ್ಲಿಗೆ ವಾಮನನಾಗಿಯೇ ಬರಬೇಕಾಯಿತು! ಸಣ್ಣತನದ ಬುದ್ಧಿಯಲ್ಲಿಯೇ ಮುಳುಗಿದ್ದ ಬಲಿ ಚಕ್ರವರ್ತಿಗೆ ವಾಮನನ ವ್ಯಾಪ್ತಿ ಅರಿವಿಗೆ ಬರುವುದಾದರೂ ಹೇಗೆ? ಆದುದರಿಂದಲೇ ಅವನು ವಾಮನ ಕೇಳಿದ ಮೂರು ಹೆಜ್ಜೆಗಳನ್ನು ಸ್ವಲ್ಪವೂ ವಿಚಾರಿಸಿದೆ ‘ದಾನ’ ಮಾಡಿದ. ಕುಬ್ಜನಾಗಿದ್ದ ವಾಮನ ಕೂಡಲೇ ಬೆಳೆಯತೊಡಗಿ, ಬೆಳೆದು ಬೆಳೆದು ಬೆಳೆಯುತ್ತಲೇಹೋದ! ವಿಷ್ಣುವಿನ ಈ ಬೆಳವಣಿಗೆಯ ಬೆಳಕಿನಲ್ಲಿ ಬಲಿಯು ತನ್ನ ಅಹಂಕಾರವನ್ನೇ ‘ಬಲಿ’ ಕೊಡಬೇಕಾಯಿತು. ಒಂದು ಹೆಜ್ಜೆಯಲ್ಲಿ ಇಡಿಯ ಭೂಮಿಯನ್ನೂ, ಎರಡನೆಯ ಹೆಜ್ಜೆಯಲ್ಲಿ ಆಗಸವನ್ನೂ ಅಳೆದ ವಿಷ್ಣುವು, ‘ಮೂರನೆಯ ಹೆಜ್ಜೆಗೆ ಅವಕಾಶ ಎಲ್ಲಿ’ ಎಂದು ಬಲಿಯನ್ನು ಕೇಳಿದ. ವಿಷ್ಣುವಿನ ಮೂರನೆಯ ಹೆಜ್ಜೆಗೆ ಸ್ಥಳವನ್ನು ಒದಗಿಸಬಲ್ಲ ತಾಣ ಇಡಿಯ ಸೃಷ್ಟಿಯಲ್ಲಿಯೇ ಎಲ್ಲಾದರೂ ಇದ್ದೀತೆ? ಆದರೆ ಅಂಥದೊಂದು ನೆಲೆಯೂ ಇದ್ದೀತು ಎಂದು ಬಲಿಯ ‘ತಲೆ’, ಎಂದರೆ ಅವನ ಅಹಂಕಾರ, ಆಲೋಚಿಸಿತು. ಈ ಅಹಂಕಾರ ತೊಲಗದೆ ವಿಷ್ಣುವಿನೊಂದಿಗೆ ಬಲಿಗೆ ತಾದಾತ್ಮ್ಯ ಒದಗುವಂತಿರಲಿಲ್ಲ. ಈ ಅರಿವು ಬಲಿಯಲ್ಲಿ ಮೂಡಿತು. ಆ ಕ್ಷಣವೇ ಅವನು ತ್ರಿವಿಕ್ರಮನ ಮೂರನೆಯ ಹೆಜ್ಜೆಗೆ ತಾಣವಾಗಿ ತನ್ನ ತಲೆಯನ್ನು ಒಪ್ಪಿಸಿದ. ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ, ಅವನ ಅಹಂಕಾರವನ್ನು ಇಲ್ಲವಾಗಿಸಿದ; ಆ ಮೂಲಕ ಬಲಿಗೆ ಸರ್ವವ್ಯಾಪಕವೂ ಸಾರ್ವಕಾಲಿಕವೂ ಆದ ‘ಸೋsಹಂ’ಭಾವದ ಚಿರಂಜೀವಿಪದವಿಯನ್ನು ಅನುಗ್ರಹಿಸಿದ.

ಪುರಾಣದ ರೂಪಕಗಳು ಐತಿಹಾಸಿಕ ಕಥನಗಳಲ್ಲ; ಅವು ನಿತ್ಯವಾಗಿರುವ ಜೀವನದರ್ಶನದ ಪ್ರತಿಮೆಗಳು; ಎಲ್ಲ ಕಾಲಕ್ಕೂ ಒದಗುವ ಅರಿವಿನ ಬೆಳಕು. ನಮ್ಮ ಮನೋಬುದ್ಧಿಗಳಲ್ಲಿ ಸುಪ್ತವಾಗಿರುವ ಅಹಂಕಾರದ ದಮನವಾಗಬೇಕು; ಆಗ ಮಾತ್ರವೇ ಎಲ್ಲೆಲ್ಲೂ ವ್ಯಾಪಿಸಿರುವ ಆನಂದದ ಅನುಭವ ದಕ್ಕೀತು – ಎಂಬುದೇ ಬಲಿಪಾಡ್ಯಮಿಯ ಕಾಣ್ಕೆ.

✒️ಎಸ್.ಸೂರ್ಯಪ್ರಕಾಶ ಪಂಡಿತ್
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?